ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆ ಮಾದೇಶ್ವರ ವನ್ಯಜೀವಿ ವಿಭಾಗ ಹಾಗೂ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಮತ್ತೊಮ್ಮೆ ಚಿರತೆ ದಾಳಿ ನಡೆಸಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ನಾಗಮಲೆ ಗ್ರಾಮದ ಅಣ್ಣಯ್ಯ ಅವರ ಮನೆಯ ಮುಂದೆ ಇದ್ದಂತ ನಾಯಿಯ ಮೇಲೆ ಗುರುವಾರ ಸಂಜೆ 6:30 ರಲ್ಲಿ ಚಿರತೆ ದಾಳಿ ನಡೆಸಿದ್ದು, ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ದಾಳಿ ಮಾಡಿ ಹೊತ್ತೊಯ್ದಿದೆ. ಇದೇ ಸಂದರ್ಭದಲ್ಲಿ ಅಣ್ಣಯ್ಯ ಹಾಗೂ ಆತನ ಪತ್ನಿ ಭಾಗ್ಯ ಮತ್ತು ಮಕ್ಕಳಿಬ್ಬರು ಮನೆಯ ಮುಂದೆಯೇ ಇದ್ದರು. ಕಣ್ಣಮುಂದೆಯೇ ಚಿರತೆ ನಾಯಿಯನ್ನು ಒತ್ತೊಯ್ಯುವುದನ್ನು ನೋಡಿದ ಅಣ್ಣಯ್ಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಯಬೀತರಾಗಿದ್ದಾರೆ.

ಅರಣ್ಯ ಅಧಿಕಾರಿಗಳ ದೌಡು:ಘಟನೆ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ನಾಗಮಲೆಗೆ ತೆರಳಿ ಪರಿಶೀಲಿಸಿದ್ದು ಬೆಳಗ್ಗೆ ಬಂದು ಘಟನೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಗ್ರಾಮದ ನಿವಾಸಿಗಳು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.