ಚಾಮರಾಜನಗರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳ ಮೇವಿಗೆ ಹಾಹಾಕಾರ ಉಂಟಾಗಿದ್ದು, ರೈತರು ಸಮಸ್ಯೆ ಅನುಭವಿಸುವಂತಾಗಿದೆ.
ತಾಲೂಕಿನ ಮುತ್ತಿಗೆ, ಹೆಗ್ಗೋಠಾರ, ಬದನಗುಪ್ಪೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವು ಲಭ್ಯವಾಗದೇ, ರೈತಾಪಿ ವರ್ಗ ಸಂಕಷ್ಟಕ್ಕೆ ಒಳಗಾಗಿದೆ. ಸಕಾಲಕ್ಕೆ ಮಳೆಯಾಗದ ಪರಿಮಯಣಾಮ ಮೇವಿನ ಕೊರತೆ ಉಂಟಾಗಿದ್ದು, 400-500 ರೂ, ಕೊಟ್ಟು ಮೇವನ್ನು ಬೇರೆಡೆಯಿಂದ ಖರೀದಿ ಮಾಡುವಂತಾಗಿದೆ. ಇತ್ತೀಚೆಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಹೆಚ್ಚಿನ ಹಣವನ್ನು ನೀಡಿದರೂ ಮೇವು ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಮುತ್ತಿಗೆ ಗ್ರಾಮದ ಯುವ ಮುಖಂಡ ಕಾರ್ಗೋ ಮಹಾದೇವ ಸ್ವಾಮಿ ಜನತಾ ರಾಯಭಾರಿಯೊಂದಿಗೆ ಮಾತನಾಡಿ, ನಮ್ಮ ಭಾಗದಲ್ಲಿ ಮಳೆಯಿಲ್ಲದ ಕಾರಣ ಮೇವಿಗೆ ಅಭಾವ ಉಂಟಾಗಿದೆ. ಈ ಹಿಂದೆ 100-200 ರೂ, ಗಳಿಗೆ ಒಂದು ಹೊರೆ ಹುಲ್ಲು ದೊರೆಯುತ್ತಿತ್ತು. ಆದರೆ ಈಗ 400-500 ರೂ, ಕೊಟ್ಟು ಮೇವನ್ನು ಖರೀದಿ ಮಾಡುವಂತಾಗಿದೆ. ಇತ್ತೀಚೆಗೆ ಹೆಚ್ಚಿನ ಹಣ ಕೊಟ್ಟರು ಮೇವು ಲಭ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ನಮ್ಮ ಭಾಗದಲ್ಲಿ ಗೋಶಾಲೆಗಳನ್ನು ತೆರೆಯುವ ಮೂಲಕ ಜಾನುವಾರುಗಳಿಗೆ ಅಗತ್ಯ ಮೇವನ್ನು ಒದಗಿಸಬೇಕೂ. ಜಿಲ್ಲಾಡಳಿತ ಇತ್ತ ಗಮನಹರಿಸಿ ರೈತರ ಸಮಸ್ಯೆಗೆ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ವೀರತೇಗೌಡ ಮತ್ತು ಸಿದ್ದಯ್ಯ ಮಾತನಾಡಿ, ಜಿಲ್ಲಾಡಳಿತ ಮತ್ತು ತಾಲೂಕು ಅಧಿಕಾರಿಗಳು ಮುತ್ತಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದನ-ಕರುಗಳಿಗೆ ಉಂಟಾಗಿರುವ ಮೇವಿನ ಸಮಸ್ಯೆಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.