ಯಳಂದೂರು: ಕುಂಚ ಹಿಡಿದು ಕುಳಿತ ಕಲಾವಿದರಿಗೆ ಸ್ಫೂರ್ತಿಯಾಗಿದ್ದು ಐತಿಹಾಸಿಕ ಬಳೆ ಮಂಟಪ. ಇಕ್ಕೆಲದಲ್ಲಿರುವ ಮರದಡಿಯ ಬೆಳಕು – ನೆರಳಿನ ಆಟ!
ಇದು ಚಾಮರಾಜನಗರದ ಯಳಂದೂರಿನಲ್ಲಿ ಭಾನುವಾರ ನಡೆದ ಕಲಾಶಿಬಿರದ ಒಂದು ಪಕ್ಷಿ ನೋಟ. ಇಲ್ಲಿನ ಏ ರಿಚ್ ಫೌಂಡೆಶನ್, ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ, ಅಭ್ಯಾಸಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಜಲವರ್ಣ ಶಿಬಿರ ನಡೆಯಿತು. ಇದೆ ವೇಳೆ ಅಭ್ಯಾಸಿ ಟ್ರಸ್ಟ್ ರಂಗ ತಂಡದ ಕಲಾವಿದರ ‘ನೆಲ ತಾಯಿ – ಗೀತಗಾಯನ’ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ಮೈಸೂರು ಸಾಂಪ್ರದಾಯಿಕ ಶೈಲಿ ಕಲಾವಿದರಾದ ಶ್ರೀಹರಿ ಕೆ.ಎಸ್. ಅವರು ಮಾತನಾಡಿ, “ಕಲೆ-ಸಂಸ್ಕೃತಿ-ಪರಂಪರೆ ಉಳಿಸುವ ಕೆಲಸ ಯಳಂದೂರಿನಂತಹ ಪಟ್ಟಣದಲ್ಲಿ ಸಾಧ್ಯವಾಗಿಸಿದ್ದು ಶ್ಲಾಘನೀಯ. ಏ ರಿಚ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀನಿವಾಸ್ ಅವರು ಈ ಮಹತ್ವದ ಕಾರ್ಯ ಮಾಡುತ್ತಿರುವುದು ಹೆಮ್ಮೆ ಅನಿಸುತ್ತದೆ. ಇಂತಹ ಕಲಾ ಶಿಬಿರಗಳು ನಡೆಯುವುದರಿಂದ ಇಲ್ಲಿನ ಕಲೆ-ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಸಮಾಜದಲ್ಲಿ ಜಾಗೃತಿ ಮೂಡಲಿದೆ. ಇನ್ನಷ್ಟು ಶಿಬಿರಗಳು ನಡೆಯಬೇಕು. ಇದಕ್ಕೆ ಇಲ್ಲಿನ ಕಲಾ ಸಮುದಾಯ ಕೈಜೋಡಿಸಬೇಕು” ಎಂದರು.
ಅಭ್ಯಾಸಿ ಟ್ರಸ್ಟ್ ಸಂಸ್ಥಾಪಕರಾದ ಕಿರಣ್ ಗಿರ್ಗಿ ಮಾತನಾಡಿ, “ಕಲೆ, ಕಲಾವಿದರ ಸಂಗಮ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಲಿದೆ ಎಂದರು. ಹವ್ಯಾಸಿ ಟ್ರಸ್ಟ್ ರಂಗ ಕಲಾವಿದರು ಬಳೆ ಮಂಟಪದ ಎದುರು ಪರಿಸರ ಜಾಗೃತಿ ಮೂಡಿಸುವ ‘ನೆಲ ತಾಯಿ’ – ಗೀತಗಾಯನ’ ಕಾರ್ಯಕ್ರಮ ನೀಡಿ ಸಹೃದಯರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರದ ಉರಗ ತಜ್ಞ ಎಂ.ಎಸ್.ಮಹೇಶ್, ವರ್ಣಶ್ರೀ ಪ್ರಶಸ್ತಿ ಕಲಾವಿದ ಟ್ಯಾಬ್ಲೋ ಮಹದೇವ್, ಸಮಕಾಲೀನ ಕಲಾವಿದ ಗಣೇಶ್ ಧಾರೇಶ್ವರ್, ಏ ರಿಚ್ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸು ಎಚ್.ಆರ್., ಕಲಾ ಶಿಬಿರದ ನಿರ್ದೇಶಕ ಕಾಂತರಾಜ್ ಎನ್. ಉಪಸ್ಥಿತರಿದ್ದರು.
ಕಲಾ ಶಿಬಿರದಲ್ಲಿ, ತುಮಕೂರಿನ ಲೋಕೇಶ್ ಆರ್, ಮನೋಜ್ ಎಂ.ಎಸ್., ಕಲಬುರಗಿಯ ಶಿವಕುಮಾರ್ ಎಸ್.ಜಕ್ಕನಳ್ಳಿ, ಯಾದಗಿರಿಯ ವಿಶ್ವ, ಬೆಳಗಾವಿಯ ಮಲ್ಲಿಕಾರ್ಜುನ್ ತೋರಣಗಟ್ಟಿ, ಬೆಂಗಳೂರಿನ ವಿನೋದ್ ಕುಮಾರ್ ಎಂ., ಚೇತನ್ ಚುಕ್ಕಿ ಆರ್, ಮಂಡ್ಯದ ಬೈರವ್ ಬಿ.ಎಂ., ಚಾಮರಾಜನಗರದ ಮಹೇಶ್, ರಾಜೇಂದ್ರ, ಮಾದಪ್ಪ, ಶಿವಕುಮಾರಸ್ವಾಮಿ, ಅನಿಲ್ ಕುಮಾರ್, ಗುಂಡ್ಲುಪೇಟೆಯ ರಾಜೇಂದ್ರ, ಯಳಂದೂರಿನ ಮಾದೇಶ್, ದುಂದು, ಲೋಕೇಶ್, ರಾಚಪ್ಪ ಪಾಲ್ಗೊಂಡಿದ್ದರು. ಅಲ್ಲದೆ, ಮೈಸೂರಿನ ರವಿವರ್ಮ ಆರ್ಟ್ ಇನ್ಸ್ಟಿಟ್ಯೂಟ್ನ ಸಿಂಧು ಎನ್., ಸ್ವಾಮಿ ಟಿ., ಶೃತಿ ಎಂ., ಆಕಾಶ್ ಬಿ., ಮಹೇಂದರ್ ಆರ್. ಮತ್ತು ಧನುಷ್ ಶಿಬಿರದಲ್ಲಿ ಕಲಾಕೃತಿಗಳನ್ನು ರಚಿಸಿದರು.