ಚಾಮರಾಜನಗರ: ತಾಲೂಕಿನ ಹೊಂಗನೂರು ಗ್ರಾಮದ ಕಾಂಗ್ರೆಸ್ ಮುಖಂಡರೊಬ್ಬನ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹೊಂಗನೂರು ಗ್ರಾಮದ ಲಾಂಗ್ ಮಹದೇವ್ ಎಂಬಾತ ಹಲ್ಲೆಗೆ ಒಳಗಾದ ವ್ಯಕ್ತಿ. ಈತನಿಗೆ ಯಾರೋ ಕಿಡಿಗೇಡಿಗಳು ಗುರುವಾರ ಸಂಜೆಯ ವೇಳೆಯಲ್ಲಿ ಕರೆಮಾಡಿ ಯಾವುದೋ ಜಮೀನಿನ ವಿಚಾರ ಮಾತನಾಡುವಂತೆ ಗ್ರಾಮದ ಸಮೀಪದಲ್ಲಿರುವ ವಸತಿ ನಿಲಯದ ಬಳಿ ಬರುವಂತೆ ಹೇಳಿದ್ದಾರೆ. ಅದರಂತೆ ಒಬ್ಬನೇ ಹಾಸ್ಟೆಲ್ ಸಮೀಪ ಬಂದಾಗ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ.
ಈ ವೇಳೆ ಸ್ಥಳೀಯರಿಗೆ ವಿಷಯ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಮಹದೇವ್ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಸಹಕಾರ ಮಾಡಿದ್ದಾರೆ. ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಗ್ರಾಮಸ್ಥರು ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.