ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ತಮಿಳುನಾಡಿನಿಂದ ಬಂದು ಅಕ್ರಮವಾಗಿ ಒಣಗಾಂಜಾ ಸಾಗಾಣೆ ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದ ನಿವಾಸಿ ಮುಬಾರಕ್ ಎಂಬುವವನು, ಜಾಕೀರ್ ಹುಸೇನ್ ನಗರದ ಅಂಗನವಾಡಿ ಕೇಂದ್ರದ ಬಳಿ ತಮಿಳುನಾಡು ಊಟಿಯ ನಡವಟ್ಟಂ ಗ್ರಾಮದ ವಿಶ್ವೇಶ್ (19) ಅವರಿಂದ ಜೂ.24 ರಂದು ಗಾಂಜಾ ಪಡೆಯುತ್ತಿದ್ದರು. ಗುಂಡ್ಲುಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ ಆರ್.ನರೇಶ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಆರೋಪಿ ಮುಬಾರಕ್ ಓಡಿ ಹೋಗಿದ್ದು, ಆರೋಪಿ ವಿಶ್ವೇಶ್ ಅವರನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ ಆತನ ಬಳಿ ಇದ್ದ 5,000/- ರೂ ಮೌಲ್ಯದ ಸುಮಾರು 100 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತದೆ.