ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸೋಲಿಗ ಸಮುದಾಯದ ನಿಸ್ವಾರ್ಥ ಹೋರಾಟಗಾರ ಸಿದ್ದೇಗೌಡ ಅಲಿಯಾಸ್ ಅಕ್ಕಿ ಸಿದ್ದೇಗೌಡ ( 97) ಅವರು ನಿಧನ ಹೊಂದಿದ್ದು, ಸೋಲಿಗರ ಹಿರಿಯ ತಲೆಮಾರಿನ ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಗಿದೆ.
ಜಿಲ್ಲೆಯ ಸೋಲಿಗರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ಅಕ್ಕಿ ಸಿದ್ದೇಗಿಡ ಅವರು ಮುಗ್ಧ ಮನಸ್ಸಿನ ಭಾವಜೀವಿಯಾಗಿದ್ದರು. ಮಂಗಳೂರಿನ ಸಮಾಜ ಕಾರ್ಯಕರ್ತರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ತರಬೇತಿ ,ಪ್ರೇರಣೆ ,ಮಾರ್ಗದರ್ಶನದಲ್ಲಿ ಕಲಿತು ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಿ ದೌರ್ಜನ್ಯ, ಜೀತ ಪದ್ಧತಿ ವಿರುದ್ಧ ಹೋರಾಟ, ಸಂವಿಧಾನ ಬದ್ಧ ಹಕ್ಕುಗಳಿಗಾಗಿ ನಿರಂತರ ಶ್ರಮಿಸಿದ್ದರು.
ಸಿದ್ದೇಗೌಡರ ಹಾಡು ಮತ್ತು ಕುಣಿತ ಮೂಲಕವೇ ಸಭೆ ಮತ್ತು ಸಮಾರಂಭ ಆರಂಭವಾಗುತ್ತಿತ್ತು. “ಒಂಟಿ ಒಂಟಿ ಬಾಳು ಸಾಕು ಒಗ್ಗಟ್ಟು ಆಗಬೇಕು” ಹಾರಿತು ಏರಿತು ಸೋಲಿಗರ ಬಾವುಟ ” ಸಂಘಟನೆಯ ಹಾಡು ಹಾಡುವುದೆಂದರೆ ಪ್ರೀತಿಯಾದ ಪ್ರೀತಿ ಅವರಿಗೆ. ಜೂ.9 ರಂದು ನಡೆದಿದ್ದ ಆದಿವಾಸಿ ಸಾಮಾಜಿಕ ಹೋರಾಟಗಾರ ಬಿರ್ಸಾ ಮುಂಡಾ ಅವರ ಪುಣ್ಯತಿಥಿ ಸಂದರ್ಭದಲ್ಲಿ ಶ್ರೀಯುತರನ್ನು ನೆನೆಯುತ್ತ ಸೋಲಿಗ ಸಮುದಾಯದ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ ಎಂದು ಸೋಲಿಗ ಮುಖಂಡ ವಿ.ಮುತ್ತಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.