ಚಾಮರಾಜನಗರ: ಮೈಸೂರಿನಿಂದ ಚಾಮರಾಜನಗರಕ್ಕೆ ನಿತ್ಯವೂ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಸೋಮವಾರ ದಿಡೀರ್ ರದ್ದುಪಡಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ಮೈಸೂರು ರೈಲು ನಿಲ್ದಾಣದಿಂದ ನಿತ್ಯವೂ ಬೆಳಿಗ್ಗೆ 8 ಗಂಟೆಗೆ ಹೊರಡುತ್ತಿದ್ದ ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು (ಸಂಖ್ಯೆ-56210) ಗಾಡಿಯನ್ನು ದಿಡೀರ್ ರದ್ದುಗೊಳಿಸಿದ ಪರಿಣಾಮ, ನಂಜನಗೂಡು ಮತ್ತು ಮೈಸೂರು ಕಡೆಗೆ ತೆರಳುವ ನೂರಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಮೈಸೂರಿನಿಂದ ನಿತ್ಯವೂ ನೂರಾರು ನೌಕರರು ಹಾಗೂ ಸಾರ್ವಜನಿಕರು ನಂಜನಗೂಡು ಮತ್ತು ಚಾಮರಾಜನಗರಕ್ಕೆ ಬರಲು ಈ ಪ್ಯಾಸೆಂಜರ್ ರೈಲನ್ನು ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಈ ಟ್ರೈನ್ ನಲ್ಲಿ ಬರುತ್ತಾರೆ. ದಿಡೀರ್ ಪ್ಯಾಸೆಂಜರ್ ರೈಲು ರದ್ದುಗೊಂಡ ಪರಿಣಾಮ ನೌಕರರು ನಂಜನಗೂಡು ಮತ್ತು ಚಾಮರಾಜನಗರ ಕಡೆಗೆ ಬರಲು ಸಮಸ್ಯೆ ಅನುಭವಿಸುವಂತಾಯಿತು.
ತಿರುಪತಿ ಗಾಡಿಯೂ ಲೇಟ್: ಮೈಸೂರಿನಿಂದ ಬೆಳಿಗ್ಗೆ 7.45 ಗಂಟೆಗೆ ಹೊರಟು ಚಾಮರಾಜನಗರವನ್ನು 9 ಗಂಟೆಗೆ ತಲುಪಬೇಕಾದ ತಿರುಪತಿ ಎಕ್ಸ್ ಪ್ರೆಸ್ ರೈಲು ಕೂಡ ತಡವಾದ ಪರಿಣಾಮವಾಗಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮೈಸೂರು ಸೆಂಟ್ರಲ್ ರೈಲು ನಿಲ್ದಾಣ, ಚಾಮರಾಜಪುರಂ ರೈಲು ನಿಲ್ದಾಣ ಹಾಗೂ ಅಶೋಕ ಪುರಂ ರೈಲು ನಿಲ್ದಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಕಾಯಬೇಕಾದ ಸನ್ನಿವೇಶ ನಿರ್ಮಾಣವಾಯಿತು.