ಚಾಮರಾಜನಗರ: ಭಾರತದ ಹಲವಾರು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಡಾ.ಎಸ್.ಜಾನಕಿ ಅವರ ಗೀತೆಗಳನ್ನು ಎಂದಿಗೂ ಜೀವಂತವಾಗಿರುತ್ತದೆ ಎಂದು ಯುವ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀನಿಧಿ ಕುದರ್ ಬಣ್ಣಿಸಿದರು.
ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಡಾ.ಎಸ್.ಪಿ.ಬಾಲಸುಬ್ರಮ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಯುವ ಕರ್ನಾಟಕ ವೇದಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಎಸ್.ಜಾನಕಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಎಸ್.ಜಾನಕಿ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಹಾಡುಗಳನ್ನು ಹಾಡಿದ್ದಾರೆ. ಅದಲ್ಲದೇ ಉತ್ತರ ಭಾರತದಲ್ಲೂ ಹಾಡುವ ಮೂಲಕ ಗಮನ ಸೆಳೆದಿದ್ದರು. ಭಾರತವಲ್ಲದೇ ಶ್ರೀಲಂಕಾ, ಜಪಾನ್ ಹಾಗೂ ಇನ್ನಿತರೆ ದೇಶಗಳ ಹಲವಾರು ಭಾಷೆಗಳಲ್ಲೂ ಅವರು ಹಾಡಿದ್ದಾರೆ. ಅವರ ದೇಹ ನೆಲದಲ್ಲಿ ಮಣ್ಣಾಗಿರಬಹುದು. ಆದರೆ ಅವರ ಹಾಡುಗಳಲ್ಲಿ ಎಸ್.ಜಾನಕಿ ಅವರು ಸದಾಕಾಲ ಜೀವಂತವಾಗಿ ಉಳಿಯಲಿದ್ದಾರೆ ಎಂದರು.

ಡಾ.ಎಸ್.ಜಾನಕಿಯವರು ಮೂಲತಃ ಆಂಧ್ರಪ್ರದೇಶದವರಾಗಿದ್ದರೂ, ಕನ್ನಡಿಗರು ಹಾಗೂ ಮೈಸೂರಿನ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು. ಕನ್ನಡ ಭಾಷೆಯಲ್ಲೇ ಅತಿಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಸ್ವರ ಸರಸ್ವತಿ ಅಂದರೂ ತಪ್ಪಾಗಲಾರದು. ಆಗಾಗಿ ರಾಜ್ಯ ಸರ್ಕಾರ ಮೈಸೂರಿನಲ್ಲಿ ಡಾ.ಎಸ್.ಜಾನಕಿ ಅವರ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಿ, ಅವರ ಸೇವೆಯನ್ನು ಶಾಶ್ವತವಾಗಿ ಉಳಿಸಬೇಕು ಎಂದರು.
ಈ ವೇಳೆ ಡಾ.ಎಸ್.ಜಾನಕಿ ಅವರ ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಸುಮಾರು 300 ಜನರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಎಸ್.ಪಿ.ಬಾಲಸುಬ್ರಮ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಶಿವಣ್ಣ ಹೊಸೂರು, ಕಾರ್ಯದರ್ಶಿ ಎನ್.ಜೋಸೆಫ್, ಉಪಾಧ್ಯಕ್ಷರಾದ ವಸಂತಮ್ಮ, ಗೌರವಾಧ್ಯಕ್ಷರಾದ ಬಂಗಾರು, ಸಂಘಟನಾ ಕಾರ್ಯದರ್ಶಿ ನಿಂಗರಾಜು ಆಟೋ, ನಗರಸಭೆ ಮಾಜಿ ಸದಸ್ಯ ಗಣೇಶ್ ದಿಕ್ಷೀತ್, ಮುಖಂಡರಾದ ಆಲೂರು ಮಲ್ಲು, ಯುವ ಕರ್ನಾಟಕ ವೇದಿಕೆಯ ತಾಲೂಕು ಅಧ್ಯಕ್ಷ ಆರ್.ರಾಘವೇಂದ್ರ, ಗೌರವಾಧ್ಯಕ್ಷ ಸುಂದರ್ ರಾಮಸಮುದ್ರ, ತಾಲೂಕು ಉಪಾಧ್ಯಕ್ಷರಾದ ರಾಜೇಂದ್ರ ಮಡಿವಾಳ, ಕಾರ್ಯದರ್ಶಿ ಮಹೇಶ್, ಪ್ರಮೋದ್, ಕಲಾ ಪೋಷಕರಾದ ಕೃಷ್ಣ ನಾಯಕ್, ಎಂ.ಶಂಕರ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಮ್ಮ, ಜಾನಪದ ಕಲಾವಿದ ಗೌರಿಶಂಕರ್ ಹಾಗೂ ಸೋಬಾನೆ ಕಲಾವಿದರು ಹಾಗೂ ಇತರರು ಹಾಜರಿದ್ದರು.
ಕೋಟ್:
ಡಾ.ಎಸ್.ಜಾನಕಿ ಅವರು ಆಂಧ್ರಪ್ರದೇಶದವರಾದರೂ, ಕನ್ನಡದ ನೆಲದಲ್ಲಿ ಮಣ್ಣಾಗಿರುವುದು ನಾವೆಲ್ಲರೂ ಗೌರವ ಪಡುವಂತಹ ವಿಚಾರವಾಗಿದೆ. ಜಿಲ್ಲೆಯ ಕಲಾವಿದರು ಹಾಗೂ ಸಾರ್ವಜನಿಕರು ಹಿರಿಯ ಕಲಾವಿದರ ಬಗ್ಗೆ ಎಷ್ಟೊಂದು ಗೌರವ ಇಟ್ಟುಕೊಂಡಿದ್ದಾರೆ ಎಂಬುದು ಈ ಮೂಲಕ ಸಾಕ್ಷಿಯಾಗಿದೆ.
|ಶ್ರೀ ರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ