ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ತಾವರೆಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೈಸೂರಿನ ನಿವಾಸಿಯಾದ ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಯೋಗೀಶ್ (38) ಮೃತಪಟ್ಟವರು. ಮೃತರು ಕ್ಯಾಬ್ ಚಾಲಕರಾಗಿದ್ದು ವಾಹನವನ್ನು ಕೆರೆ ಹತ್ತಿರ ನಿಲ್ಲಿಸಿ ಬಹಿರ್ದೆಸೆಗೆ ಹೋದ ಬಳಿಕ ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ,ಮೈಸೂರು ಸಿಟಿ ಪೋಲೀಸ್ ಪೇದೆ ಮಂಜುಶ್ರೀ ನಗರದ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಬುಧವಾರವೇ ಘಟನೆ ನಡೆದಿದ್ದು ಗುರುವಾರ ಇಡೀ ದಿನ ಶೋಧ ನಡೆಸಿದರೂ ಶವ ಪತ್ತೆ ಆಗಿರಲಿಲ್ಲ.ಶುಕ್ರವಾರ ಬೆಳಿಗ್ಗೆ ಶವ ಸ್ವಾಭಾವಿಕವಾಗಿ ಮೇಲೆ ಎದ್ದಿತು. ನಂತರ ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಷಯ ತಿಳಿದು ನಗರ -ನಂಜನಗೂಡು ಮಾರ್ಗ ದ ಗ್ರಾಮದ ಕೆರೆ ಹತ್ತಿರ ಬೆಳಿಗ್ಗೆ ಸಾಕಷ್ಟು ಜನ ಸೇರಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸ್ವಲ್ಪ ಕಾಲ ತೊಂದರೆಯಾಯಿತು.
ನಗರದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶೇಷಾದ್ರಿ,ಎಎಸ್ಸೈ ಗಿರೀಶ್, ಮುಖ್ಯ ಪೇದೆ ವೆಂಕಟೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.