ಚಾಮರಾಜನಗರ, ಆ.26: ಹನೂರು ಶೂಟೌಟ್ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಆಗ್ರಹಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವ ಘಟನೆ ಅತ್ಯಂತ ಗಂಭೀರವಾಗಿದೆ. ಈ ಘಟನೆಯ ಬಗ್ಗೆ ಸರ್ಕಾರದ ಅಧಿಕೃತ ಹೇಳಿಕೆ ಹಾಗೂ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸತ್ಯಾಸತ್ಯತೆ ಸಾರ್ವಜನಿಕರಿಗೆ ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ತನಿಖೆಯಲ್ಲಿ ಘಟನೆ ನಡೆದ ಸ್ಥಳದ ಸಂಪೂರ್ಣ ಪರಿಶೀಲನೆ, ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳ ವೈಜ್ಞಾನಿಕ ಪರಿಶೀಲನೆ, ಮರಣೋತ್ತರ ಪರೀಕ್ಷೆ ಹಾಗೂ ಫಾರೆನ್ಸಿಕ್ ವರದಿಗಳ ಪರಿಶೀಲನೆ, ಅರಣ್ಯ ಸಿಬ್ಬಂದಿಯ ಹೇಳಿಕೆಗಳು, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ಮತ್ತು ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಬೇಕು. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಅದರ ಸಂಪೂರ್ಣ ಸತ್ಯವೂ ತನಿಖೆಯಿಂದ ಹೊರಬರಬೇಕು. ಅದೇ ರೀತಿ ಯಾವುದೇ ನಿಯಮ ಉಲ್ಲಂಘನೆ ಅಥವಾ ಅಧಿಕಾರದ ದುರುಪಯೋಗ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಕರನ್ನು ರಕ್ಷಿಸುವುದು ಅಥವಾ ನಿರಪರಾಧಿಗಳನ್ನು ಆರೋಪಿಗಳನ್ನಾಗಿ ಮಾಡುವುದನ್ನು ನಾವು ಒಪ್ಪುವುದಿಲ್ಲ. ಹಾಗೂ 8 ಕಳ್ಳ ಬೇಟೆ ತಡೆಯುವ ಶಿಬಿರಗಳು ಮತ್ತು 10 ವಸತಿಗೃಹಗಳ ಧ್ವಂಸವಾಗಿರುವುದರ ತನಿಖೆಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ದ್ವಂಶವಾಗಿರುವ ಸ್ಥಳದಿಂದ 60 ರಿಂದ 70 ಕಿಲೋ ಮೀಟರ್ ಅಂತರದಲ್ಲಿ ಮೈಸೂರಿನ ಅರಮನೆ, ಪಾರಂಪರಿಕ ಕಟ್ಟಡಗಳು ಹಾಗೂ ಡ್ಯಾಮ್ ಗಳು ಇದ್ದು ಅನಾವುತವಾಗುವ ಸಂಭವ ಇತ್ತು ಆದ್ದರಿಂದ ಸತ್ಯ ಹೊರಬಂದು, ನ್ಯಾಯ ಸಿಗುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಹನೂರು ಶೂಟೌಟ್ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ಯಾಗಲೂ ಸಿಬಿಐ ಗೆ ವಹಿಸಿ ಹಾಗೂ 8 ಕಳ್ಳ ಬೇಟೆ, ತಡೆಯುವ ಶಿಬಿರ ಮತ್ತು 10 ವಸತಿಗೃಹಗಳ ಧ್ವಂಸ ಮಾಡಿರುವುದನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಯ ಅಂತಿಮ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಅರಣ್ಯ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಸಿಬ್ಬಂದಿಗಳಿಗೆ ಬಾಡಿ ಕ್ಯಾಮರಾ ಹಾಗೂ ಆಧುನಿಕ ಶಸ್ತ್ರಾಸ್ತ್ರ ಗಳನ್ನು ಬಳಸಬೇಕು ಎಂದು ಒತ್ತಾಯಿಸಿದರು.
2011ರಿಂದ ಇಲ್ಲಿಯವರೆಗೆ ಚಾಮರಾಜನಗರ ಅರಣ್ಯ ವಿಭಾಗ ಒಂದರಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು 66 ಬಾರಿ ಗುಂಡಿನ ಚಕಮಕಿ ನಡೆದಿರುವುದಕ್ಕೆ ಅರಣ್ಯ ಇಲಾಖೆಯ ಏನು ಕ್ರಮ ಕೈಗೊಂಡಿದೆ ಎಂಬುದರ ಮಾಹಿತಿ ತಿಳಿಸಬೇಕು ಕಳ್ಳಬೇಟೆ ಸಂಪೂರ್ಣ ತಡೆಗಟ್ಟಲು Anti-Poaching Camps ಮತ್ತು ರಾತ್ರಿ ಗಸ್ತು ಹೆಚ್ಚಿಸಬೇಕು. ಖಾಲಿ ಇರುವ ಅರಣ್ಯ ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಬಂಡೀಪುರದಲ್ಲಿ STPF (Special Tiger Protection Force) ಅನ್ನು ಇನ್ನಷ್ಟು ಬಲಪಡಿಸಬೇಕು.ಕಾಡ್ಲಿಚ್ಚು ತಡೆಗೆ Fire Lines, ನೀರಿನ ಮೂಲಗಳು ಮತ್ತು ಮುಂಚಿತ ಎಚ್ಚರಿಕಾ ವ್ಯವಸ್ಥೆ ಬಲಪಡಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಕಾನೂನು ಸಲಹೆಗಾರ ಜಿ.ಮಹಾದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಗಿರೀಶ್, ಕಾರ್ಯದರ್ಶಿ ವಿ.ವೀರಭದ್ರಸ್ವಾಮಿ, ಚಂದ್ರು, ವೇದವಲ್ಲಭ ಹಾಜರಿದ್ದರು.