ಬೆಂಗಳೂರು: ನಾಡಹಬ್ಬ ದಸರಾದಲ್ಲಿ ಕಂಬಳಕ್ಕೆ ಅವಕಾಶ ಬೇಕು-ಬೇಡ ಎಂಬ ಕುರಿತು ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಮೈಸೂರು ದಸರಾದಲ್ಲಿ ಕಂಬಳಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಮೈಸೂರು ದಸರಾ ಕೇವಲ ಒಂದು ಪ್ರಾದೇಶಿಕ ಹಬ್ಬವಲ್ಲ—ಇದು ಕರ್ನಾಟಕದ ನಾಡಹಬ್ಬ. ಹೇಗೆ ಯಕ್ಷಗಾನ ಹಾಗೂ ದೇಶದ ವಿವಿಧ ಶಾಸ್ತ್ರೀಯ ಕಲಾ ಪ್ರದರ್ಶನಗಳಿಗೆ ದಸರಾದಲ್ಲಿ ಸ್ಥಾನವಿದೆಯೋ, ಹಾಗೆಯೇ ಕರಾವಳಿಯ ಹೆಮ್ಮೆಯ ಕಂಬಳಕ್ಕೂ ಅವಕಾಶ ನೀಡುವುದು ಇಡೀ ಕರ್ನಾಟಕವನ್ನು ಒಗ್ಗೂಡಿಸುವ ಒಳ್ಳೆಯ ಹೆಜ್ಜೆ ಎಂದು ಹೇಳಿದ್ದಾರೆ.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಕಂಬಳವನ್ನು ವಿರೋಧಿಸಿರುವ ಬರಹವನ್ನು ಹಂಚಿಕೊಂಡಿರುವ ಅವರು, ಎಲ್ಲಾ ಪ್ರದೇಶಗಳಿಗೂ ಸ್ಥಾನ ಕೊಡುವ ನಾಡಹಬ್ಬವೇ ನಿಜವಾದ ನಾಡಹಬ್ಬ ಎಂದು ತಿರುಗೇಟು ನೀಡಿದ್ದಾರೆ.